ಕೇರಳದ ಬಹುಕೋಟಿ ಅಕ್ರಮ ಚಿನ್ನ ಸಾಗಣೆ ಹಗರಣದ ರೂವಾರಿ ಸ್ವಪ್ನ ಸುರೇಶ್, ವಿಶ್ವಕ್ಕೇ ಚಿನ್ನ ಪೂರೈಕೆ ಮಾಡುವ ಆಫ್ರಿಕಾದ ಗಣಿಗಾರಿಕೆ ಗ್ಯಾಂಗ್ಗಳ ಜೊತೆಗೂ ನಂಟು ಹೊಂದಿದ್ದರು ಎಂಬ ವಿಚಾರವನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಯಲಿಗೆಳೆದಿದೆ. ಎನ್ಐಎಯ ವಿಚಾರಣೆ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಸಾಮಾನ್ಯ ಸಂಪರ್ಕವಿದೆ ಎಂದು ಸ್ವಪ್ನ ಸುರೇಶ್ ಬಾಯ್ಬಿಟ್ಟಿದ್ದ ಬೆನ್ನಲ್ಲೇ, ಈ ಮಾಹಿತಿ ಹೊರಬಿದ್ದಿದೆ.
ವಿಶ್ವದಲ್ಲೇ ಅತಿಹೆಚ್ಚು ಚಿನ್ನದ ಗಣಿಗಾರಿಕೆ ಹೊಂದಿರುವ ದಕ್ಷಿಣ ಆಫ್ರಿಕಾದ ಚಿನ್ನದ ಗಣಿಗಳನ್ನು ಶಸ್ತ್ರಸಜ್ಜಿತ ಯುವಕರು 2019ರಲ್ಲಿ 25 ಸಲ ಲೂಟಿ ಮಾಡಿದ್ದರು. ಕೇರಳದ ಚಿನ್ನ ಕಳ್ಳಸಾಗಣೆಯ 5ನೇ ಆರೋಪಿ ಕಳೆದ ವರ್ಷ ತಾಂಜೇನಿಯಾಕ್ಕೆ ಭೇಟಿ ನೀಡಿದ್ದು, ಆಫ್ರಿಕಾದ ಗಣಿ ಲೂಟಿಯಲ್ಲಿ ಭಾಗಿಯಾಗಿದ್ದನೇ ಎಂಬ ಬಗ್ಗೆ ಪರಿಶೀಲನೆ ಎನ್ಐಎ ಪರಿಶೀಲನೆ ನಡೆಸುತ್ತಿದೆ. ಏತನ್ಮಧ್ಯೆ, ಆಫ್ರಿಕಾದಿಂದ ದುಬೈ ಮೂಲಕ ಭಾರತ ಸೇರಿ ನಾನಾ ಭಾಗಗಳಿಗೆ ಚಿನ್ನದ ಪೂರೈಕೆಯಾಗುತ್ತದೆ.
ವಿಶೇಷವೆಂದರೆ, ಕೇರಳದಲ್ಲಿ ಸಿಕ್ಕಿಬಿದ್ದಿರುವ ಚಿನ್ನದ ಸ್ಮಗ್ಲಿಂಗ್ ಗ್ಯಾಂಗ್ ದುಬೈ ಅನ್ನೂ ಸಹ ತಮ್ಮ ಚಿನ್ನ ಕಳ್ಳಸಾಗಣೆಯ ಹಬ್ ಮಾಡಿಕೊಂಡಿತ್ತು. ಅಲ್ಲದೆ, ಕೇರಳದಲ್ಲಿ ಕ್ರಿಮಿನಲ್ ಕೇಸ್ ಹಿನ್ನೆಲೆಯ ಆರೋಪಿಗಳನ್ನು ಅಕ್ರಮ ಚಿನ್ನಸಾಗಣೆಯಲ್ಲಿ ಬಳಸಲಾಗುತ್ತಿತ್ತು ಎಂಬುದು ಬಯಲಾಗಿದೆ. ಈ ಎಲ್ಲ ಮಾಹಿತಿಗಳನ್ನು ಸಿಬಿಐ ಹಾಗೂ ಭಾರತದ ಇಂಟರ್ಪೋಲ್ ಜೊತೆಗೆ ಹಂಚಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.