ರೌಡಿ ಶೀಟರ್ ಆದ ಆತ ಹೇಳಿಕೊಳ್ಳುವಷ್ಟು ಒಳ್ಳೆಯವನೂ ಆಗಿರಲಿಲ್ಲ. ಹಲವು ಪೊಲೀಸ್ ಠಾಣೆಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳು ಅವನ ಮೇಲಿತ್ತು. ಪುಂಡು ಪೋಕರಿಗಳ ಸಂಗವೇ ಅವನ ಜೀವಕ್ಕೆ ಕುತ್ತು ತಂದಿದೆ. ನಿನ್ನೆ ರಾತ್ರಿ ಮನೆ ಬಳಿಯಿಂದ ಈತನನ್ನು ಕರೆದೊಯ್ದಿದ್ದ ಕೆಲ ಸ್ನೇಹಿತರು ಕುಡಿದ ಅಮಲಿನಲ್ಲಿ ಬರ್ಬರವಾಗಿ ಕೊಲೆಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಹತ್ಯೆಯಾದ ರೌಡಿ ಶೀಟರ್ ಹೆಸರು ಶ್ರೀಕಾಂತ್. ಈತ ಆನೇಕಲ್ನ ಬಳ್ಳೂರು ನಿವಾಸಿ.
ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಶ್ರೀಕಾಂತ್ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಪ್ರಕರಣಗಳು ಕೂಡ ದಾಖಲಾಗಿವೆ. ಈತನಿಗೆ ಪುಂಡ ಪೋಕರಿಗಳ ಸಹವಾಸ ಜಾಸ್ತಿಯೇ ಇತ್ತು. ಹಾಗಾಗಿ ನಿನ್ನೆಯು ಸಹ ಆಗ ತಾನೆ ಕೆಲಸ ಮಗಿಸಿ ಮನೆಗೆ ಬಂದಿದ್ದ ಈತನನ್ನು ಎಣ್ಣೆ ಪಾರ್ಟಿ ಮಾಡೋದಕ್ಕೆ ಅಂತ ಕರೆದೊಯ್ದಿದ್ದ ಕೆಲ ಈತನ ಸ್ನೇಹಿತರು ತಲೆಯ ಮೇಲೆ ಸೈಜು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಕೃತ್ಯ ಎಸಗಿದವರು ಯಾರು ಅಂತಾ ಗೊತ್ತಿಲ್ಲ ಎಂದು ಮೃತ ಶ್ರೀಕಾಂತ್ನ ತಾಯಿ ವರಲಕ್ಷ್ಮಿ ತಿಳಿಸಿದ್ದಾರೆ. ನಿನ್ನೆ ಮನೆಯಲ್ಲಿದ್ದ ಶ್ರೀಕಾಂತ್ ನನ್ನು ಮೂರರಿಂದ ನಾಲ್ಕು ಜನರು ಬಂದು ಕರೆದುಕೊಂಡು ಹೋಗಿದ್ದಾರೆ. ಸ್ನೇಹಿತರ ಜೊತೆ ಹೋಗುವ ಅವಸರದಲ್ಲಿ ಮೊಬೈಲ್ ಸಹ ಮನೆಯಲ್ಲಿಯೇ ಬಿಟ್ಟು ಹೋಗಿದ್ದಾನೆ. ಅತ್ತಿಬೆಲೆ ಬಳಿಯ ಅರೇಹಳ್ಳಿ ಎಂಬ ಗ್ರಾಮದ ರಾಗಿ ಹೊಲದಲ್ಲಿ ಪಾರ್ಟಿ ಮಾಡಿದ್ದಾರೆ. ರಾತ್ರಿ ಬೇರೆ ಆಗಿತ್ತು. ಹೀಗಾಗಿ ಕಂಠಪೂರ್ತಿ ಕುಡಿದಿದ್ದ ಎಲ್ಲರೂ ಫುಲ್ ಟೈಟ್ ಆಗಿದ್ದರು. ಹಳೆ ತಗಾದೆಯೋ ಏನೋ ಕೆಲ ಹುಡುಗರು ಶ್ರೀಕಾಂತ್ ಬಳಿ ಜಗಳ ಮಾಡೋದಕ್ಕೆ ಶುರು ಮಾಡಿದ್ದಾರೆ. ನಂತರ ಕೈ ಕೈ ಮಿಲಾಯಿಸಿದ್ದಾರೆ. ಶ್ರೀಕಾಂತ್ ಮೇಲೆ ಒಂದೇ ಸಮನೆ ಹಲ್ಲೆಗೆ ಮುಂದಾಗಿದ್ದಾರೆ. ಶ್ರೀಕಾಂತ್ ಕೂಡ ಬಿಡಿಸಿಕೊಳ್ಳೋದಕ್ಕೆ ಪ್ರಯತ್ನ ಪಟ್ಟಿದ್ದಾನೆ. ಆದ್ರೆ ಆತನನ್ನು ಕೆಳಗೆ ಬೀಳಿಸಿ ಎಣ್ಣೆ ನಶೆಯಲ್ಲಿ ಆತನ ತಲೆ ಮೇಲೆ ದೊಡ್ಡ ಗಾತ್ರದ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.