ಸುಶಾಂತ್ ಸಿಂಗ್ ಸಾವಿನ ಬಳಿಕ ನಟಿ ಕಂಗನಾ ರಣಾವತ್ ಬಾಲಿವುಡ್ ನ ಪ್ರಬಲ ವ್ಯಕ್ತಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ನೆಪೋಟಿಸಂ ವಿರುದ್ಧ ಕಿಡಿ ಕಾರುತ್ತ, ಸುಶಾಂತ್ ಸಾವಿಗೆ ಬಾಲಿವುಡ್ ಮಾಫಿಯ ಕಾರಣ ಎಂದು ಹೇಳುತ್ತಿದ್ದಾರೆ. ಈ ವಿಚಾರವಾಗಿ ಕರಣ್ ಜೊಹರ್, ಆದಿತ್ಯಾ ಚೋಪ್ರಾ, ಮಹೇಶ್ ಭಟ್ ಸೇರಿದ್ದಂತೆ ಬಾಲಿವುಡ್ ನ ಪ್ರಬಲ ವ್ಯಕ್ತಿಗಳ ವಿರುದ್ಧ ನೆಪೋಟಿಸಂ ಆರೋಪ ಮಾಡಿದ್ದಾರೆ. ಅಲ್ಲದೆ ಹೊರಗಿನಿಂದ ಬಂದ ಪ್ರತಿಭೆಯನ್ನು ತುಳಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸುಶಾಂತ್ ಸಾವಿನ ಬಳಿಕ ಕಂಗನಾ ಹೇಳಿಕೆಗಳು ಬಾಲಿವುಡ್ ನಲ್ಲಿ ಬಿರುಗಾಳಿಯನ್ನೆ ಎಬ್ಬಿಸಿದೆ. ‘ಸುಶಾಂತ್ ಸಿಂಗ್ ಅವರನ್ನು ಬಾಲಿವುಡ್ ನಿಂದ ಬಹಿಷ್ಕರಿಸಲಾಗಿತ್ತು, ಇದು ಸುಶಾಂತ್ ಮೇಲೆ ತೀವ್ರ ಪರಿಣಾಮ ಬೀರಿತ್ತು. ಸುಶಾಂತ್ ಸಾವಿಗೆ ಪ್ರಮುಖ ಕಾರಣ ಇದೆ’ ಎಂದು ಕಂಗನಾ ಹೇಳಿದ್ದರು. ಇದೀಗ ಸುಶಾಂತ್ ಸಿಂಗ್ ಕುಟುಂಬದ ವಕೀಲ ವಿಕಾಸ್ ಸಿಂಗ್ ಕಂಗನಾ ಬಗ್ಗೆ ಅಸಮಾಧಾನ ಹೊರಹಾಕಿ, ಕಂಗನಾ ಅಭಿಪ್ರಾಯವನ್ನು ತಳ್ಳಿ ಹಾಕಿದ್ದಾರೆ.
ಈ ಬಗ್ಗೆ ವೆಬ್ ಪೋರ್ಟಲ್ ಜೊತೆ ಮಾತನಾಡಿದ ವಿಕಾಸ್ ಸಿಂಗ್ “ಕಂಗನಾ ತನ್ನ ಅಜೆಂಡವನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ವೈಯಕ್ತಿಕ ಸಮಸ್ಯೆ ಹೊಂದಿರುವ ವ್ಯಕ್ತಿಗಳ ಮೇಲೆ ಆಕ್ರಮಣ ಮಾಡುತ್ತಿದ್ದಾರೆ. ಕಂಗನಾ ತನ್ನದೆ ಆದ ದಾರಿಯಲ್ಲದ್ದಾರೆ. ಸುಶಾಂತ್ ಕುಟುಂಬದ ಎಫ್ ಐ ಆರ್ ಗೆ ಅವರ ಆರೋಪಗಳಿಗೆ ಯಾವುದೆ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.
ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ಮಾತ್ರ ಎಫ್ ಐ ಆರ್ ದಾಖಲಿಸಿದ್ದಾರೆ. ಸುಶಾಂತ್ ಸಾವಿಗೂ ಉದ್ಯಮದ ಇತರ ವ್ಯಕ್ತಿಗಳಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದರೆ ಕಂಗನಾ ಆದರೆ ವಯಕ್ತಿಕ ಸಮಸ್ಯೆ ಹೊಂದಿರುವ ವ್ಯಕ್ತಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ ಎಂದು ವಿಕಾಶ್ ಸಿಂಗ್ ಹೇಳಿದ್ದಾರೆ.