ಕಬ್ಬಿಣ ಕದ್ದಿದ್ದಾನೆ ಎಂದು ಆರೋಪಿಸಿ ಗ್ರಾಮಸ್ಥರು ಯುವಕನನ್ನು ಹಿಡಿದು ಮರಕ್ಕೆ ಕಟ್ಟಿ ಥಳಿಸಿ ಸಾಯಿಸಿರುವ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಆನ್ವ್ಲಾದ ನೀರಾವರಿ ವಿಭಾಗದ ಟ್ಯೂಬ್ವೆಲ್ ಕಾಲೋನಿ ನಿವಾಸಿ ಬಸಿತ್ ಅಲಿ(20) ಮೃತಪಟ್ಟ ದುರ್ದೈವಿ.
ಟ್ಯೂಬ್ವೆಲ್ ಆಫೀಸ್ನಿಂದ ಕಬ್ಬಿಣವನ್ನು ಕದ್ದಿದ್ದಾನೆ ಎಂದು ಆರೋಪಿಸಿ ಆತನನ್ನು ಥಳಿಸಿದ್ದಲ್ಲದೆ ಸ್ಥಳದಲ್ಲಿ ಜಮಾಯಿಸಿದ್ದ ಗುಂಪೊಂದು ಆತನನ್ನು ಬೇವಿನ ಮರಕ್ಕೆ ಕಟ್ಟಿಹಾಕಿ ಹೊಡೆದಿದ್ದಾರೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಭಾರೀ ಹೊಡೆತ ತಿಂದಿದ್ದ ಯುವಕ ತೀರಾ ನಿತ್ರಾಣಗೊಂಡಿದ್ದ. ಮೊದಲು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡುವ ಬದಲು ಪೊಲೀಸರು ಥಳಿಸಿದ ಯುವಕರನ್ನು ಠಾಣೆಗೆ ಕರೆದೊಯ್ಯುವಲ್ಲೇ ಮಗ್ನರಾಗಿದ್ದರು.
ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಿದ್ದರೆ, ನಮ್ಮ ಮಗ ಬದುಕುಳಿಯುತ್ತಿದ್ದ ಎಂದು ಪೊಲೀಸರ ವಿರುದ್ಧ ಮೃತನ ಕುಟುಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಗ್ರಾಮದ 30 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ಕೈಗೊಂಡಿದ್ದಾರೆ.