ಕಾಡುಗೊಲ್ಲ, ಸವಿತಾ ಸಮಾಜ, ಕೋಳಿ, ಕುರುಬ ಸಮಾಜದವರು ಸೇರಿದಂತೆ ಹಲವು ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೂ, ಹಿಂದುಳಿದ ವರ್ಗಗಳ ಕೋಟಾದಲ್ಲಿ ಸಿಗುತ್ತಿದ್ದ ಶೇಕಡವಾರು ಮೀಸಲಾತಿಯೇ ಅವರಿಗೆ ದೊರಕಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಒಟ್ಟಾರೆ ಮೀಸಲಾತಿ ಶೇ 50 ದಾಟುವಂತಿಲ್ಲ. ಪರಿಶಿಷ್ಟ ಪಂಗಡದವರಿಗೆ ಶೇ 3ರಷ್ಟಿರುವ ಮೀಸಲಾತಿಯನ್ನು ಶೇ 7ಕ್ಕೆ ಹೆಚ್ಚಿಸಲು ವಾಲ್ಮೀಕಿ ಸಮುದಾಯ ಬೇಡಿಕೆ ಇಟ್ಟಿದೆ. ಸರ್ಕಾರ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಚಿಸಿ, ವರದಿ ಸಲ್ಲಿಸುವಂತೆ ಸೂಚಿಸಿದೆ. ವರದಿ ಬಂದ ನಂತರ ಹಿಂದುಳಿದ ವರ್ಗಗಳಿಂದ ಪರಿಶಿಷ್ಟ ಪಂಗಡಕ್ಕೆ ಬರುವ ಹೆಚ್ಚುವರಿ ಜಾತಿಗಳನ್ನು ಪರಿಗಣಿಸಿ ಮೀಸಲಾತಿ ನಿಗದಿ ಮಾಡಲಾಗುವುದು ಎಂದರು.
ಅರ್ಹತೆ ಇರುವ ಎಲ್ಲಾ ವರ್ಗದವರೂ ನ್ಯಾಯಯುತವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮನವಿ ಮಾಡಿದ್ದಾರೆ. ಕುರುಬ ಸಮಾಜ ಸಹ ಕಾಗಿನೆಲೆ, ಹೊಸದುರ್ಗ ಶ್ರೀಗಳ ನೇತೃತ್ವದಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತಿದೆ. ಅವರ ಹೋರಾಟಕ್ಕೆ ತಮ್ಮ ಬೆಂಬಲವೂ ಇದೆ ಎಂದರು.