ಗುಡಿಬಂಡೆ: ಬೆಂಗಳೂರಿನ ಡಿ.ಜೆ.ಹಳ್ಳಿ, ಕಾವಲ್ ಬೈರಸಂದ್ರ ಮತ್ತು ಕೆ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಪ್ರತಕರ್ತರ ಮೇಲೆ ನಡೆಸಿರುವ ಹಲ್ಲೆಯನ್ನು ಖಂಡಿಸಿ ಗುಡಿಬಂಡೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ತಾಲೂಕ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಮಂಜುನಾಥ ಮಾತನಾಡಿ, ಬೆಂಗಳೂರಿನ ಡಿ.ಜೆ.ಹಳ್ಳಿ, ಕಾವಲ್ ಬೈರಸಂದ್ರ ಮತ್ತು ಕೆ.ಜೆ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆ.೧೧ರ ಮಂಗಳವಾರ ರಾತ್ರಿ ನಡೆದ ಗಲಭೆಯ ವರದಿ ಮಾಡಲು ಹೋಗಿದ್ದ ಪತ್ರಕರ್ತರ ಮೇಲೆ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸಿ ಪತ್ರಕರ್ತರ ಕ್ಯಾಮರಾಗಳನ್ನು, ಮೊಬೈಲ್ ಗಳನ್ನು ಕಸಿದಿಕೊಂಡು ನಾಶಪಡಿಸಿದ್ದಾರೆ. ಈ ಸುದ್ದಿಯನ್ನು ವರದಿ ಮಾಡಲು ಹೋಗಿದ್ದ ವರದಿಗಾರರ ಮೇಲೆ ಸಹ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಂತಹವರ ವಿರುದ್ದ ಕೂಡಲೇ ಕಠಿಣ ಕ್ರಮ ತೆಗೆದುಕೊಂಡು, ಅವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಇದರ ಜೊತೆಗೆ ಮುಂದಿನ ದಿನಗಳಲ್ಲಿ ಪತ್ರಕರ್ತರ ಮೇಲೆ ಇಂತಹ ದೌರ್ಜನ್ಯಗಳು ನಡೆಯದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ತಗೆದುಕೊಳ್ಳಬೇಕೆಂದರು.
ಪ್ರತಿಭಟನಾ ಮನವಿಯನ್ನು ತಹಶೀಲ್ದಾರ್ ಡಿ.ಹನುಮಂತರಾಯಪ್ಪಗೆ ಸಲ್ಲಿಸಿದರು. ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಇದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಯಕಾರಿ ಸಮಿತಿ ಸದಸ್ಯರಾದ ಎನ್.ವಿ.ವೆಂಕಟೇಶ್, ಜೆ.ವೆಂಕಟರಾಯಪ್ಪ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಯದರ್ಶಿ ಆರ್.ಬಾಲಾಜಿ, ಖಜಾಂಚಿ ಜಿ.ವಿ.ಶ್ರೀನಾಥ್, ಸಹಕಾರ್ಯದರ್ಶಿ ವಿ.ರಾಜಶೇಖರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ವಿ.ರಮೇಶ್, ಎಸ್.ಎನ್.ನಾಗೇಂದ್ರ, ಜಿ.ರಾಜೇಶ್, ಎನ್.ವಿ.ಗಂಗಾಧರ್, ಜಿ.ವಿ.ಪರಮೇಶ್, ಎಲ್.ಎನ್.ಈಶ್ವರಪ್ಪ. ಮಾಧ್ಯಮ ವರದಿಗಾರರಾದ ಬಾಲಗಂಗಾಧರ್ ತಿಲಕ್, ಸತೀಶ್ ಬಾಬು.ಎ , ಮಹ್ಮದ್ ನಾಸೀರ್ ಸೇರಿದಂತೆ ಇತರರು ಭಾಗವಹಿಸಿದ್ದರು.