ಸಿಲ್ಕ್ಬೋರ್ಡ್ ಸಂಚಾರ ದಟ್ಟಣೆಗೆ ಪರಿಹಾರ ನೀಡುವ ಬೊಮ್ಮನಹಳ್ಳಿ – ಬಿ.ಟಿ.ಎಂ ಲೆಔಟ್ ಸಂಪರ್ಕಿಸುವ ರಸ್ತೆ ಹಾಗೂ ಸೇತುವೆ ಸೋಮುವಾರ ಉದ್ಘಾಟನೆ
-ವಿಶ್ವ ವಿಖ್ಯಾತ ಸಿಲ್ಕ್ ಬೋರ್ಡ್ ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವ ಸಂಪರ್ಕ ರಸ್ತೆ ಹಾಗೂ ಸೇತುವೆ ಉದ್ಘಾಟನೆ
-ಪ್ರತಿದಿನ 50 ಸಾವಿರ ವಾಹನ ಸವಾರರ ತೊಂದರೆ ನಿವಾರಣೆ
-ಕಂದಾಯ ಸಚಿವ ಆರ್ ಅಶೋಕ್ ಅವರಿಂದ ಸೆಪ್ಟೆಂಬರ್ 7 ಸೋಮವಾರದಂದು ಉದ್ಘಾಟನೆ
ಸೆಪ್ಟೆಂಬರ್ 05, 2020: ಟ್ರೋಲ್ಗಳು ಹಾಗೂ ವೈರಲ್ ವಿಡಿಯೋಗಳ ಮೂಲಕ ವಿಶ್ವವಿಖ್ಯಾತಿಯನ್ನ ಪಡೆದಿರುವ ಸಿಲ್ಕ್ ಬೋರ್ಡ್ ಜಂಕ್ಷನ್ ನ ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವ ಬೊಮ್ಮನಹಳ್ಳಿ – ಬಿ.ಟಿ.ಎಂ ಲೇಔಟ್ ರಸ್ತೆ ಹಾಗೂ ಸಂಪರ್ಕ ಸೇತುವೆಯ ಉದ್ಘಾಟನೆ ಸೆಪ್ಟೆಂಬರ್ 7 ರ ಸೋಮುವಾರದಂದು ನಡೆಯಲಿದೆ. ಆ ದಿನ ಕಂದಾಯ ಸಚಿವರಾದ ಶ್ರೀ ಅಶೋಕ್ ಅವರು ಈ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಿದ್ದಾರೆ ಎಂದು ಬೊಮ್ಮನಹಳ್ಳಿ ವಾರ್ಡ್ ನ ಪಾಲಿಕೆ ಸದಸ್ಯರೂ ಆಗಿರುವ ಉಪ ಮೇಯರ್ ಸಿ.ಆರ್.ರಾಮಮೋಹನ್ ರಾಜ್ ಅವರು ತಿಳಿಸಿದರು.
ಪ್ರತಿದಿನ ಲಕ್ಷಾಂತರ ವಾಹನ ಸವಾರರು ಈ ಜಂಕ್ಷನ್ ನಲ್ಲಿ ಸಂಚಾರ ದಟ್ಟಣೆಯ ಕಾರಣ ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದರು. ಈ ಬವಣೆಯನ್ನು ನಿವಾರಿಸುವ ದೃಷ್ಟಿಯಿಂದ ಕೈಗೊಂಡ ಕಾಮಗಾರಿಯ ಪೂರ್ಣಗೊಂಡಿದೆ. ಈ ಸಂಪರ್ಕ ರಸ್ತೆಯ ಕಾರಣದಿಂದಾಗಿ ಸುಮಾರು 50 ಸಾವಿರ ವಾಹನ ಸವಾರರು ಸಂಚಾರ ದಟ್ಟಣೆಯ ಬವಣೆಯಿಂದ ಬಚಾವ್ ಆಗಲಿದ್ದಾರೆ. ಬೊಮ್ಮಹಳ್ಳಿ ಹಾಗೂ ಬಿ.ಟಿ.ಎಂ ಪ್ರದೇಶದ ಜನರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ರಸ್ತೆಯನ್ನು ನಿರ್ಮಿಸಲಾಗಿದೆ ಎಂದು ಬೊಮ್ಮನಹಳ್ಳಿ ವಾರ್ಡ್ ನ ಪಾಲಿಕೆ ಸದಸ್ಯರೂ ಆಗಿರುವ ಉಪ ಮೇಯರ್ ಸಿ.ಆರ್.ರಾಮಮೋಹನ್ ರಾಜ್ ಅವರು ತಿಳಿಸಿದರು.
ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ, ಬಿಟಿಎಂ ಲೇಔಟ್ ನ ಶಾಸಕ ರಾಮಲಿಂಗಾ ರೆಡ್ಡಿ, ಮೇಯರ್ ಸೇರಿದಂತೆ ಬಿಬಿಎಂಪಿಯ ಉನ್ನತಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.