‘ಸರ್ಕಾರವು ಕೊರೊನಾ ನೆಪದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಯನ್ನು ನಿಷೇಧಿಸಿರುವುದು ಸರಿಯಲ್ಲ. ಸರ್ಕಾರ ಅವಕಾಶ ನೀಡದಿದ್ದರೂ ನಾವು ಅದನ್ನು ಆಚರಣೆ ಮಾಡಿಯೇ ತೀರುತ್ತೇವೆ’ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಭಾನುವಾರ ತಿಳಿಸಿದರು.
ತಾಲ್ಲೂಕಿನ ದೇವಲಗಾಣಗಾಪುರದ ದತ್ತ ದೇವಸ್ಥಾನದಲ್ಲಿ ಅವರು ಕೊರೊನಾ ದೂರವಾಗಿ ಜನರಿಗೆ ನೆಮ್ಮದಿ ಬರಲಿ ಎಂದು ಪ್ರಾರ್ಥಿಸಿ ದತ್ತ ಮಹಾರಾಜರ ಪಾದುಕೆಗಳಿಗೆ ವಿಶೇಷ ಪೂಜೆ, ಗಣಹೋಮ, ದತ್ತ ಹೋಮದ ನಂತರ ದತ್ತ ದೇವಸ್ಥಾನದ ಶಿವಾನಂದ ಮಠದಲ್ಲಿ ರಾಮಕೋಟಿ ಜಪಯಜ್ಞ ನೆರವೇರಿಸಿದರು.
ನಂತರ ಮಾತನಾಡಿದ ಅವರು, ‘ಇದೇ 22ರಂದು ಆರಂಭವಾಗುವ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕು. ಪರವಾನಗಿ ನೀಡದಿದ್ದರೂ ನಾವು ಗಣೇಶೋತ್ಸವ ಮಾಡಿಯೇ ತೀರುತ್ತೇವೆ. ಸರ್ಕಾರ ಬಾರ್ಗಳನ್ನು ಪ್ರಾರಂಭಿಸಲು ಅವಕಾಶ ನೀಡುತ್ತದೆ. ಆದರೆ ಸಾರ್ವಜನಿಕ ಗಣೇಶೋತ್ಸವಕ್ಕೆ ಮಾತ್ರ ಅವಕಾಶ ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಕೂಡಲೇ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು. ನೀವು ಬೇಕಾದರೆ ನಮ್ಮನ್ನು ಬಂಧಿಸಿ. ಕೊರೊನಾ ನೀತಿ ನಿಯಮಗಳ ಅಡಿಯೇ ನಾವು ಗಣೇಶೋತ್ಸವ ಮಾಡುತ್ತೇವೆ’ ಎಂದು ಅವರು ತಿಳಿಸಿದರು.
ಸಂಗಮದ ಶಿವಾನಂದ ಮಠದಲ್ಲಿ ಏರ್ಪಡಿಸಿದ್ದ ಕೋಟಿ ದತ್ತ ಜಪಯಜ್ಞ ಕಾರ್ಯಕ್ರಮದಲ್ಲಿ ಪ್ರಮೋದ ಮುತಾಲಿಕ್, ಸೇನೆಯ ಅಧ್ಯಕ್ಷ ಆಂದೋಲಾ ಮಠದ ಸಿದ್ಧಲಿಂಗ ಸ್ವಾಮೀಜಿ, ಪ್ರಮುಖರಾದ ಆನಂದ ಶೆಟ್ಟಿ ಅಡಿಯಾರ, ಗಂಗಾಧರ ಕುಲಕರ್ಣಿ, ಪ್ರವೀಣ ಕುಂಟೋಜಿಮಠ, ಮಾಶಾಳದ ಕೇದಾರ ಸ್ವಾಮೀಜಿ, ದೇವಸ್ಥಾನದ ಪೂಜಾ ಸಮಾರಂಭದಲ್ಲಿ ಅರ್ಚಕರಾದ ಪ್ರಸನ್ನ ಭಟ್ ಪೂಜಾರಿ, ವಿಠ್ಠಲ ಭಟ್ ಪೂಜಾರಿ ಹಾಗೂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ.ಪೂಜಾರಿ ಮತ್ತು ದತ್ತು ನಿಂಬರ್ಗಿ ಮತ್ತು ಹುಬ್ಬಳ್ಳಿ – ಧಾರವಾಡದಿಂದ ಬಂದಿದ್ದ ಶ್ರೀರಾಮಸೇನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.