ತಮಿಳುನಾಡು ವಿಧಾನಸಭೆ ಚುನಾವಣೆ ಮುಂದಿನ ವರ್ಷವೇ ಇದ್ದು, ರಾಜಕೀಯ ಪಕ್ಷಗಳು ಸಿದ್ಧತೆಗಳನ್ನಾರಂಭಿಸಿವೆ. ಈ ನಡುವೆ, ಆಡಳಿತಾರೂಢ ಎಐಎಡಿಎಂಕೆ ಈ ಬಾರಿ ಚುನಾವಣೆಯಲ್ಲಿ ಮೇಲೇಳುವ ಲಕ್ಷಣಗಳಿಲ್ಲ. ಸಮರ್ಥ ನಾಯಕತ್ವದ ಕೊರತೆ ಅಲ್ಲಿ ಕಾಡುತ್ತಿದೆ. ಚುನಾವಣೆಗೆ ಪಕ್ಷವನ್ನು ಮುನ್ನಡೆಸುವವರು ಯಾರು ಎಂಬ ವಿಚಾರದಲ್ಲಿ ಮುಖ್ಯಮಂತ್ರಿ ಕೆ.ಪಳನಿಸಾಮಿ ಮತ್ತು ಉಪ ಮುಖ್ಯಮಂತ್ರಿ ಒ ಪನ್ನೀರಸೆಲ್ವಂ ಪರಸ್ಪರ ಕತ್ತಿ ಝಳಪಿಸಿದ್ದಾರೆ.
ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಒ ಪನ್ನೀರ ಸೆಲ್ವಂ ನಿನ್ನೆ ನಡೆದ ಸಭೆಯಲ್ಲಿ ಕೆ.ಪಳನಿಸಾಮಿ ಜತೆಗೆ ವಾಕ್ಸಮರವನ್ನೇ ನಡೆಸಿದ್ದರು. ಇದರ ಬೆನ್ನಿಗೆ ಇಂದು ಮುಖ್ಯಮಂತ್ರಿ ಪಳನಿಸಾಮಿ ಅಧ್ಯಕ್ಷತೆಯ ಕೋವಿಡ್ 19 ಸಭೆಗೂ ಪನ್ನೀರ ಸೆಲ್ವಂ ಗೈರಾಗಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಇಬ್ಬರೂ ನಾಯಕರು ಪಕ್ಷದೊಳಗೆ ತಮ್ಮ ಬಲ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ.
ಗ್ರೀನ್ವೇಸ್ ರೋಡ್ನಲ್ಲಿರುವ ಪನ್ನೀರ ಸೆಲ್ವಂ ನಿವಾಸದಲ್ಲಿ ಅತೃಪ್ತರ ಸಭೆ ನಡೆದಿದ್ದು, ಅಲ್ಲಿ ಪಕ್ಷದ ಡೆಪ್ಯುಟಿ ಕೋಆರ್ಡಿನೇಟರ್ ಕೆ.ಪಿ.ಮುನುಸಾಮಿ, ರಾಜ್ಯಸಭಾ ಸದಸ್ಯ ಆರ್.ವೈತಿಲಿಂಗಂ ಭಾಗವಹಿಸಿದ್ದರು. ಇದಾದ ಬಳಿಕ, ಮಾಧ್ಯಮದವರ ಜತೆಗೆ ಮಾತನಾಡಿದ ವೈತಿಲಿಂಗಂ ಈ ಮೀಟಿಂಗ್ಗೆ ಅಷ್ಟೇನೂ ಮಹತ್ವ ಕಲ್ಪಿಸಬೇಡಿ. ಸಹಜ ಭೇಟಿಯಷ್ಟೇ ಎಂದು ತೇಪೆ ಹಚ್ಚಿದ್ದಾರೆ.
ಮುಂದಿನ ವರ್ಷ ನಡೆಯುವ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ವೈತಿಲಿಂಗಂ ಹೇಳಿದ್ದಿಷ್ಟೆ- ಅಕ್ಟೋಬರ್ 7ರಂದು ಸಭೆಯಲ್ಲಿ ಅದು ತೀರ್ಮಾನವಾಗಲಿದ್ದು, ಘೋಷಣೆ ಮಾಡಲಾಗುತ್ತದೆ. ಮುಂದಿನ ಚುನಾವಣೆಯಲ್ಲೂ ಎಐಎಡಿಎಂಕೆ ಅಧಿಕಾರ ಚುಕ್ಕಾಣಿಯನ್ನು ಹಿಡಿದುಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)