ಮುಂಬೈ: ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕೆಡವಿದ ನಟಿ ಕಂಗನಾ ರನೌತ್ ಅವರ ಆಸ್ತಿಗೂ, ನನಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಂಸಿಯಿಂದ ಕೆಡವಲ್ಪಟ್ಟ ಆ ಕಟ್ಟಡದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಆಕೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ನೆಲಸಮಗೊಂಡ ಕಟ್ಟಡವು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಸೇರಿದ್ದು ಎಂದು ಹೇಳಲಾಗಿತ್ತು.
ಜೂನ್ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನಂತರ ನಟಿ ಕಂಗನಾ ಅವರ ಹಿಂದಿ ಚಲನಚಿತ್ರೋದ್ಯಮದ ಬಗ್ಗೆ ತಮ್ಮ ಹೇಳಿಕೆಗಳ ಮೂಲಕ ಮುನ್ನೆಲೆಗೆ ಬಂದಿದ್ದರು.
ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದಾಗಿನಿಂದಲೂ ಶಿವಸೇನಾ ನಾಯಕರು ಮತ್ತು ಕಂಗನಾ ನಡುವಿನ ವಾಕ್ಸಮರ ತಾರಕಕ್ಕೇರಿತ್ತು. ಬಳಿಕ ಮುಂಬೈನಲ್ಲಿ ತನ್ನ ರಕ್ಷಣೆ ಬಗ್ಗೆ ಟ್ವೀಟ್ ಮಾಡಿದ್ದ ಕಂಗನಾ, ಮುಂಬೈ ಪೊಲೀಸರ ಉಸ್ತುವಾರಿಯಲ್ಲಿರುವುದು ನನಗೆ ಭಯವಾಗುತ್ತಿದೆ. ಹೀಗಾಗಿ ಅವರಿಗೆ ರಕ್ಷಣೆ ಒದಗಿಸುವಂತೆ ಗೃಹ ಸಚಿವ ಅಮಿತ್ ಶಾ ಅವರನ್ನು ಕೋರಿದ್ದರು. ಬಳಿಕ ಗೃಹ ಸಚಿವಾಲಯವು ಅವರಿಗೆ ವೈ-ಪ್ಲಸ್ ಶ್ರೇಣಿಯ ಭದ್ರತೆಯನ್ನು ಒದಗಿಸಿತ್ತು.
ಇತ್ತೀಚೆಗಷ್ಟೇ, ಮುಂಬೈನ ತನ್ನ ಕಟ್ಟಡವನ್ನು ನೆಲಸಮಗೊಳಿಸುವಿಕೆಯ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.