ಉಪ್ಪಿನಂಗಡಿ: ಹಲವರಿಗೆ ಮೊಬೈಲ್ ಕೈನಲ್ಲಿದ್ದರೆ ಸಾಕು ಲೋಕವನ್ನೆಲ್ಲ ಮರೆತು ಬಿಡುತ್ತಾರೆ. ಗೇಮ್, ಸೆಲ್ಫಿ, ಚಾಟಿಂಗ್ ಗೀಳು ಹತ್ತಿಸಿಕೊಂಡವರು ಲೆಕ್ಕವಿಲ್ಲದಷ್ಟು ಮಂದಿ. ಈ ನಡುವೆ ಇದೇ ಗೀಳಿಗೆ ಹಲವರ ಪ್ರಾಣ ಹಾನಿಯೂ ಸಂಭವಿಸಿದೆ. ಇದೀಗ ಮೊಬೈಲ್ನಲ್ಲಿ ಮಾತನಾಡುತ್ತ ಮೈಮರೆತ ಯುವಕನೊಬ್ಬ 15 ಅಡಿ ಎತ್ತರದಿಂದ ಬಿದ್ದು ಪ್ರಾಣ ಬಿಟ್ಟಿದ್ದಾನೆ.
ಶಿಕಾರಿಪುರ ತಾಲೂಕಿನ ಮದಗಹಾರನಹಳ್ಳಿ ನಿವಾಸಿ ಹೊನ್ನಪ್ಪ ಬಿನ್ ಫಕೀರಪ್ಪ (30) ಮೃತ.
ಉಪ್ಪಿನಂಗಡಿ ಸಮೀಪದ ಕಣಿಯೂರು ಗ್ರಾಮದ ಮಾರುತಿಪುರದ ರೈಸ್ಮಿಲ್ನಲ್ಲಿ ಹೊನ್ನಪ್ಪ ಕೆಲಸ ಮಾಡುತ್ತಿದ್ದ. ಇದೇ ಕಟ್ಟಡದ ವಸತಿಯಲ್ಲಿ ವಾಸ್ತವ್ಯ ಹೊಂದಿದ್ದ ಯುವಕ ಬುಧವಾರ ರಾತ್ರಿ ಮೊಬೈಲ್ನಲ್ಲಿ ಮಾತನಾಡುತ್ತಲೇ ದುರ್ಮರಣಕ್ಕೀಡಾಗಿದ್ದಾನೆ.
ಮಹಡಿಯ ದಂಡೆಯಲ್ಲಿ ಕುಳಿತು ಮೊಬೈಲ್ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಮಾತನಾಡುವ ಗುಂಗಿನಲ್ಲೇ ಮೈಮರೆತ್ತಿದ್ದ ಆತ ಆಯತಪ್ಪಿ 15 ಅಡಿ ಕೆಳಕ್ಕೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾನೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.