ಕಳೆದ ಒಂದು ವಾರದಿಂದ ಕೊಡಗಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ಕೆ ಆರ್ ಎಸ್ ಜಲಾಶಯದ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಗೆ ಇನ್ನು ಒಂದೇ ಅಡಿ ಮಾತ್ರ ಬಾಕಿ ಇದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆ.ಆರ್.ಎಸ್ ಜಲಾಶಯವು ಇಂದು ಸಂಜೆ ವೇಳೆಗೆ ಭರ್ತಿಯಾಗುವ ಸಾಧ್ಯತೆ ಇದೆ. 124.80 ಅಡಿ ಗರಿಷ್ಠ ಸಾಮರ್ಥ್ಯವನ್ನು ಕೆ ಆರ್ ಎಸ್ ಜಲಾಶಯ ಹೊಂದಿದ್ದು, ಪ್ರಸ್ತುತ ನೀರಿನ ಮಟ್ಟ 123 ಅಡಿ ಗಡಿ ದಾಟಿದೆ. ಈ ಮೂಲಕ ಜಲಾಶಯ ಭರ್ತಿಯಾಗಲು ಇನ್ನು ಒಂದು ಅಡಿಯಷ್ಟೇ ಬಾಕಿ ಇದೆ.
20,923 ಕ್ಯೂಸೆಕ್ ಒಳಹರಿವಿನ ಪ್ರಮಾಣವಿದ್ದು, ಜಲಾಶಯದಿಂದ 3,756 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಕೆ ಆರ್ ಎಸ್ ಜಲಾಶಯ ಗರಿಷ್ಠ 49.454 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಜಲಾಶಯದಲ್ಲಿ ಪ್ರಸ್ತುತ 47.038 ಟಿಎಂಸಿ ನೀರು ಸಂಗ್ರಹವಾಗಿದೆ.