ಮುಂದಿನ ಬಾರಿ ಈಸ್‌ ಆಫ್‌ ಡೂಯಿಂಗ್‌ ಬ್ಯೂಸಿನೆಸ್‌ ರ‍್ಯಾಂಕಿಂಗ್‌ನಲ್ಲಿ ನಲ್ಲಿ 5 ರ ಒಳಗಿನ ಸ್ಥಾನ: ಸಚಿವ ಜಗದೀಶ್‌ ಶೆಟ್ಟರ್‌ ಭರವಸೆ

0

ಮುಂದಿನ ಬಾರಿ ಈಸ್‌ ಆಫ್‌ ಡೂಯಿಂಗ್‌ ಬ್ಯೂಸಿನೆಸ್‌ ರ‍್ಯಾಂಕಿಂಗ್‌ನಲ್ಲಿ ನಲ್ಲಿ 5 ರ ಒಳಗಿನ ಸ್ಥಾನ: ಸಚಿವ ಜಗದೀಶ್‌ ಶೆಟ್ಟರ್‌ ಭರವಸೆ
•ರಾಜ್ಯದಲ್ಲಿ ರಫ್ತಿಗೆ ಉತ್ತೇಜನ ನೀಡಲು 6 ಪ್ರಮುಖ ಕ್ಷೇತ್ರಗಳ ಗುರುತು
•ಸಾಪ್ಟ್‌ವೇರ್‌ ರಫ್ತಿನಲ್ಲಿ ದೇಶದಲ್ಲಿ ನಂ 1 ಸ್ಥಾನ ಹೊಂದಿರುವ ರಾಜ್ಯ
•ಮರ್ಚಂಡೈಸ್‌ ರಫ್ತಿನಲ್ಲಿ 4 ನೇ ಸ್ಥಾನ
•ದೇಶದ ಒಟ್ಟಾರೆ ರಫ್ತಿನ ಶೇಕಡಾ 17.04% ರಷ್ಟು ಕೊಡುಗೆ ಕರ್ನಾಟಕ ರಾಜ್ಯದ್ದು

ಬೆಂಗಳೂರು ಸೆಪ್ಟೆಂಬರ್‌ 18, 2020: ಮುಂದಿನ ಬಾರಿಯ ಈಸ್‌ ಆಫ್‌ ಡೂಯಿಂಗ್‌ ಬ್ಯೂಸಿನೆಸ್‌ ರ‍್ಯಾಂಕಿಂಗ್‌ನಲ್ಲಿ ರಾಜ್ಯ ಮೊದಲ 5 ರಲ್ಲಿ ಸ್ಥಾನವನ್ನು ಪಡೆಯಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್‌ ಶೆಟ್ಟರ್‌ ಭರವಸೆ ವ್ಯಕ್ತಪಡಿಸಿದರು.

ಎಫ್‌ಕೆಸಿಸಿಐ ವತಿಯಿಂದ ನಗರದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 15 ನೇ ರಫ್ತು ಉತ್ತೇಜನಾ ಪ್ರಶಸ್ತಿಗಳನ್ನು ವಿತರಿಸಿ ಅವರು ಮಾತನಾಡಿದರು. ಈ ಬಾರಿ ಉದ್ಯಮ ಸ್ನೇಹಿ ರ‍್ಯಾಂಕಿಂಗ್‌ ನಲ್ಲಿ ಕರ್ನಾಟಕ ರಾಜ್ಯ ಕಡಿಮೆ ಸ್ಥಾನವನ್ನು ಪಡೆದಿದೆ. ಈ ಸರ್ವೆಯು ಕಳೆದ ವರ್ಷ ನವೆಂಬರ್‌ ನಲ್ಲಿ ಪ್ರಾರಂಭವಾಗಿತ್ತು. ಅಲ್ಲದೆ, ಈ ರ‍್ಯಾಂಕಿಂಗ್‌ ಮಾರ್ಚ್‌ ತಿಂಗಳಲ್ಲಿ ಪ್ರಕಟವಾಬೇಕಾಗಿತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಆಡಳೀತಾತ್ಮಕವಾಗಿ ಹಾಗೂ ನೀತಿ ನಿಯಮಗಳಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಇದರ ಪರಿಣಾಮ ಮುಂದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಾವು ಪ್ರತಿಫಲವನ್ನು ಪಡೆದುಕೊಳ್ಳಲಿದ್ದೇವೆ. ನಾವು ಹೊರತಂದಿರುವ ನೂತನ ಕೈಗಾರಿಕಾ ನೀತಿ ಹಾಗೂ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಅಧಿನಿಯಮದಲ್ಲಿನ ತಿದ್ದುಪಡಿಗಳಿಂದ ನಮ್ಮ ರಾಜ್ಯ ಉದ್ಯಮ ಸ್ನೇಹೀ ರಾಜ್ಯಗಳ ಪಟ್ಟಿಯಲ್ಲಿ ಬಹಳ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಸಾಫ್ಟ್‌ವೇರ್‌ ರಫ್ತಿನಲ್ಲಿ ದೇಶದಲ್ಲಿ ಮೊದಲ ಸ್ಥಾನವನ್ನು ಹೊಂದಿರುವ ಕರ್ನಾಟಕ ರಾಜ್ಯ, ದೇಶದ ಒಟ್ಟಾರೆ ರಫ್ತಿನ ಶೇಕಡಾ 17.04% ರಷ್ಟು ಕೊಡುಗೆಯನ್ನು ನೀಡುತ್ತಿದೆ. ಇದಕ್ಕೆ ಮತ್ತಷ್ಟು ಪುಷ್ಟಿಯನ್ನು ನೀಡುವ ಉದ್ದೇಶದಿಂದ ಕೇಂದ್ರ ಸರಕಾರದ ಉಪಕ್ರಮಗಳ ಜೊತೆಯಲ್ಲಿಯೇ ರಾಜ್ಯ ಸರಕಾರ 6 ಪ್ರಮುಖ ಕ್ಷೇತ್ರಗಳನ್ನು ಗುರುತಿಸಿದ್ದು ಕರಡು ವರದಿಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯ ಸೇವೆಗಳು, ಶೈಕ್ಷಣೀಕ ಸೇವೆಗಳು, ಇನ್ಪ್ರಾಸ್ಟಕ್ಚರ್‌ ಮತ್ತು ಕನ್ಟ್ರಕ್ಷನ್‌ ಸೇವೆಗಳು, ರೆಮಿಟೆನ್ಸ್‌ ಮತ್ತು ಇಮಿಗ್ರೇಷನ್‌ ಸಪೋರ್ಟ್‌ ಸೇವೆಗಳು, ಲಾಜಿಸ್ಟಿಕ್‌ ಮತ್ತು ಸಾರಿಗೆ ಸೇವೆಗಳ ಹಾಗೂ ಮನೋರಂಜನಾ ಸೇವಾ ವಲಯಗಳನ್ನು ಪ್ರಮುಖ ಕ್ಷೇತ್ರಗಳಾಗಿ ಗುರುತಿಸಲಾಗಿದೆ. ಇವುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕರಡು ವರದಿಯನ್ನು ಸಿದ್ದಪಡಿಸಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ದೇಶದ ಸೇವೆಗಳ ರಫ್ತಿನ ವಿಭಾಗದಲ್ಲಿ ಶೇಕಡಾ ೪೦ ರಷ್ಟು ಪಾಲನ್ನು ಹೊಂದಿದೆ. ಮರ್ಚಂಡೈಸ್‌ ರಫ್ತಿನ ಶೇಕಡಾ 18.83 ರ ಪಾಲನ್ನು ನೀಡುತ್ತಿದೆ. ಅಲ್ಲದೆ, 2019-2020 ನೇ ಸಾಲಿನಲ್ಲಿ 100 ಬಿಲಿಯನ್‌ ಡಾಲರ್‌ಗಳಷ್ಟು ರಫ್ತನ್ನು ರಾಜ್ಯ ಮಾಡಿದೆ. ಕರ್ನಾಟಕ ರಾಜ್ಯ ಕೈಗಾರಿಕೆಗಳ ಅಭಿವೃದ್ದಿಗೆ ಹಾಗೂ ಬೆಳವಣಿಗೆಗೆ ಸೂಕ್ತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಿದೆ. ರಾಜ್ಯದ ನೂತನ ಕೈಗಾರಿಕಾ ನೀತಿ 2020-2025 ಯನ್ನು ಕೇಂದ್ರ ಸರಕಾರದ ವಾಣಿಜ್ಯ ಮಂತ್ರಿಗಳಾದ ಪಿಯೂಶ್‌ ಗೋಯಲ್‌ ಅವರು ಶ್ಲಾಘಿಸಿದ್ದಾರೆ. ಎಲ್ಲಾ ಕೈಗಾರಿಕೆಗಳ ಸ್ಥಾಪನೆಗೆ ಸುಲಭ ರೀತಿಯ ಅವಕಾಶ ನೀಡುವ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಅಧಿನಿಯಮ 2020 ಕೂಡಾ ಕ್ರಾಂತಿಕಾರಿ ನಿಯಮವಾಗಿದೆ ಎಂದು ಹೇಳಿದರು.

ರಾಜ್ಯ ಸರಕಾರ ರಾಜ್ಯದಲ್ಲಿ ರಫ್ತು ಉತ್ತೇಜನ ಹಾಗೂ ಉದ್ಯೋಗಾವಕಾಶಗಳ ನಿರ್ಮಾಣಕ್ಕಾಗಿ ಹಲವಾರು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೇಲೀಕೇರಿ ಬಂದರಿನ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇದು ರಾಜ್ಯದ ರಫ್ತಿನ ಚಿತ್ರಣವನ್ನೇ ಬದಲಾಯಿಸಲಿದೆ ಎಂದು ಇದೇ ಸಂಧರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ 40 ಕೈಗಾರಿಕೋದ್ಯಮಿಗಳಿಗೆ ರಫ್ತು ಉತ್ತೇಜನಾ ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷರಾದ ಸಿ ಆರ್‌ ಜನಾರ್ಧನ, ಪೆರಿಕಾಲ್‌ ಎಂ ಸುಂದರ್‌, ಎಕ್ಸಪೋರ್ಟ್‌ ಎಕ್ಸಲೆನ್ಸ್‌ ಅವಾರ್ಡ್‌ ಸಮಿತಿಯ ಬಿ ಪಿ ಶಶಿಧರ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here