ಮೂಡಿಗೆರೆ ಚಿಕ್ಕಮಗಳೂರಿನಲ್ಲಿ ಇರುವ ಪವಿತ್ರ ಹೊರನಾಡು ಪುಣ್ಯಕ್ಷೇತ್ರವಾಗಿರುವ ಶ್ರೀ ಅನ್ನಪೂರ್ಣೇಶ್ವರಿ ದೇಗುಲದ ಭಕ್ತರಿಗೆ ಸದ್ಯ ದೇವರ ದರ್ಶನದ ಭಾಗ್ಯ ಇಲ್ಲ
ಹೊರನಾಡು : ಮೂಡಿಗೆರೆ ಚಿಕ್ಕಮಗಳೂರಿನ ಗಿರಿಶ್ರೇಣಿಗಳು ಪಶ್ಚಿಮ ಘಟ್ಟದಲ್ಲಿ ಇರುವ ರಾಜ್ಯದ ಪವಿತ್ರ ಹೊರನಾಡು ಪುಣ್ಯಕ್ಷೇತ್ರವಾಗಿರುವ ಶ್ರೀ ಅನ್ನಪೂರ್ಣೇಶ್ವರಿ ದೇಗುಲದ ಭಕ್ತರಿಗೆ ಸದ್ಯ ದೇವರ ದರ್ಶನದ ಭಾಗ್ಯ ಇಲ್ಲ.ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ದೇಶದಾದ್ಯಂತ ದೇವಸ್ಥಾನಗಳನ್ನು ತೆರೆಯಲಾಗುತ್ತಿದೆ.
ಕೊರೊನಾ ವೈರಸ್ ತಡೆಗಟ್ಟಲು ದೇಗುಲದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಹೆಚ್ಚಿನ ಕಾಲಾವಕಾಶ ಬೇಕಿರುವುದರಿಂದ ಮೂಡಿಗೆರೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿದೇಗುಲದಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಸಿಬ್ಬಂದಿಯ ಸುರಕ್ಷತೆಯನ್ನು ಮತ್ತು ದೇಗುಲಕ್ಕೆ ಆಗಮಿಸುವ ಭಕ್ತರು ಗಮನದಲ್ಲಿರಿಸಿಕೊಂಡು ದೇವರ ದರ್ಶನ, ಪೂಜೆ ಮತ್ತು ವಾಸ್ತವ್ಯದ ಅವಕಾಶಗಳನ್ನು ಮುಂದೂಡಲಾಗಿದೆ ಎಂದು ಹೊರನಾಡು ದೇವಸ್ಥಾನದ ಧರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಫೇಸ್ ಬುಕ್ ಲೈವ್ ಮೂಲಕ ಲಾಕ್ ಡೌನ್ ಆರಂಭದಿಂದಲೂ ಹೊರನಾಡಿನಲ್ಲಿ ನಿತ್ಯ ನಡೆಯುವ ಪೂಜೆಯನ್ನು ಭಕ್ತರಿಗೆ ನೋಡಲು ಅವಕಾಶವನ್ನು ಕಲ್ಪಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಇದೇ ವ್ಯವಸ್ಥೆಯನ್ನೇ ಮುಂದುವರಿಸಲಾಗುವುದು.