ರಸ್ತೆಗಿಳಿದ ಉತ್ತರ ಕರ್ನಾಟಕದ ಮೊದಲ ಸಂಚಾರಿ ಪ್ರಾಣಿ ಚಿಕಿತ್ಸಾಲಯ

0

ಹುಬ್ಬಳ್ಳಿ, ಸೆಪ್ಟೆಂಬರ್ 28: ಉತ್ತರ ಕರ್ನಾಟಕದ ಪ್ರಥಮ ಸಂಚಾರಿ ಪ್ರಾಣಿ ಚಿಕಿತ್ಸಾಲಯ ಲೋಕಾರ್ಪಣೆಗೊಂಡಿದೆ. ನಾಯಿ, ಬೆಕ್ಕು, ಬೀದಿ ಬದಿಯ ಪ್ರಾಣಿಗಳ ಸಂರಕ್ಷಣೆ, ಚಿಕಿತ್ಸೆಗೆ ಈ ಸಂಚಾರಿ ಚಿಕಿತ್ಸಾಲಯ ನೆರವಾಗಲಿದೆ.

ಸೋಮವಾರ ಹ್ಯುಮೇನ್ ಸೂಸೈಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯು ನೀಡಿರುವ ಸಂಚಾರಿ ಪ್ರಾಣಿ ಚಿಕಿತ್ಸಾಲಯವನ್ನು ಲೋಕಾರ್ಪಣೆ ಮಾಡಲಾಯಿತು. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸಮುದಾಯ ಪ್ರಾಣಿಗಳ ಆರೋಗ್ಯ ರಕ್ಷಣೆ ಲಸಿಕೆ ಮತ್ತು ಸಂತಾನೋತ್ಪತ್ತಿ ನಿಯಂತ್ರಣ ಮತ್ತಿತರ ತುರ್ತು ವೈದ್ಯಕೀಯ ಆರೈಕೆಗೆ ಇದು ಸಹಕಾರಿಯಾಗಲಿದೆ.

ಪ್ರಾಣಿಗಳಿಗೆ ತುರ್ತು ಚಿಕಿತ್ಸೆ ಒದಗಿಸಲು ನೀಡಿರುವ ಉತ್ತರ ಕರ್ನಾಟಕದ ಪ್ರಥಮ ಸಂಚಾರಿ ಪ್ರಾಣಿ ಚಿಕಿತ್ಸಾಲಯವನ್ನು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಲೋಕಾರ್ಪಣೆ ಮಾಡಿದರು.

“ನಾಯಿ, ಬೆಕ್ಕು, ಬೀದಿ ಪ್ರಾಣಿಗಳ ಸಂರಕ್ಷಣೆಗೆ ಈ ಚಿಕಿತ್ಸಾಲಯ ನೆರವಾಗಲಿದೆ. ಎಚ್‍ಎಸ್‍ಐ ಸಂಸ್ಥೆಯ ಈ ಕೊಡುಗೆ ಶ್ಲಾಘನೀಯವಾಗಿದೆ” ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಪರಮೇಶ್ವರ ನಾಯಕ್ ಮಾತನಾಡಿ ಚಿಕಿತ್ಸಾಲಯದ ಬಗ್ಗೆ ಮಾಹಿತಿ ನೀಡಿದರು. “ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಈ ಸಂಚಾರಿ ಪ್ರಾಣಿ ಚಿಕಿತ್ಸಾಲಯ ಲಾಭದ ಉದ್ದೇಶವಿಲ್ಲದೆ ಪ್ರಾಣಿಗಳ ಸಂಕಷ್ಟಕ್ಕೆ ಸ್ಪಂದಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ” ಎಂದರು.

ಪಶು ಅಂಬ್ಯುಲೆನ್ಸ್ ಸೇವೆ : ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಸುಸಜ್ಜಿತ ಸಂಚಾರಿ ಪಶುಚಿಕಿತ್ಸಾ ಆಂಬುಲೆನ್ಸ್ ವಾಹನವನ್ನು ಹಾಸನದಲ್ಲಿ ಆರಂಭಿಸಲಾಗಿದೆ. ರೈತರ ಮನೆ ಬಾಗಿಲಲ್ಲಿ ರೋಗಗ್ರಸ್ತ ಜಾನುವಾರುಗಳಿಗೆ ತಜ್ಞ ಪಶುವೈದ್ಯಕೀಯ ಸೇವೆ ನೀಡಲಾಗುತ್ತದೆ.

ಈ ಅಂಬ್ಯಲೆನ್ಸ್ ವೆಚ್ಚ 15.58 ಲಕ್ಷ ರೂ.ಗಳಾಗಿದೆ. ಸಂಚಾರಿ ಪಶು ಶಸ್ತ್ರಚಿಕಿತ್ಸಾ ಅಂಬ್ಯುಲೆನ್ಸ್ ವಾಹನವನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿರುವ ಪಶುವೈದ್ಯಕೀಯ ಪಾಲಿಕ್ಲಿನಿಕ್‍ಗೆ ನೀಡಲಾಗಿದೆ.

LEAVE A REPLY

Please enter your comment!
Please enter your name here