ಶಾಲಾ-ಕಾಲೇಜುಗಳನ್ನು ಆರಂಭಿಸುವ ಕುರಿತು ಇನ್ನು ನಿರ್ಧರಿಸಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ತಿಳಿಸಿದ್ದಾರೆ. ಈಗಾಗಲೇ ಶಾಸಕರು, ಸಂಸದರು ಹಾಗೂ ಇತರ ಜನಪ್ರತಿನಿಗಳಿಗೆ ಪತ್ರ ಬರೆದು ಅಭಿಪ್ರಾಯವನ್ನು ಕೇಳಲಾಗಿದೆಯೇ ಹೊರತು ಶಾಲಾ-ಕಾಲೇಜು ಆರಂಭ ಕುರಿತಂತೆ ಸರ್ಕಾರದ ಮುಂದೆ ಯಾವುದೇ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಿಕ್ಷಣ ಸಂಘಟನೆಗಳ ಮತ್ತು ತಜ್ಞರೊಂದಿಗೆ ಸಂವಾದ ನಡೆಸುತ್ತಿದ್ದೇನೆ. ಸದ್ಯ ನಾನು ಬೀದರ್ ಪ್ರವಾಸದಲ್ಲಿರುವುದರಿಂದ ಬೆಂಗಳೂರಿಗೆ ಬಂದ ನಂತರ ಇನ್ನಷ್ಟು ವಾಸ್ತವಾಂಶಗಳ ಬಗ್ಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಮಕ್ಕಳ ಶಿಕ್ಷಣ ಕುರಿತಂತೆ ಸರ್ಕಾರಕ್ಕೂ ಕಾಳಜಿ ಇದೆ. ಈ ನಿಟ್ಟಿನಲ್ಲಿ ಕೊರೊನಾ ಸೋಂಕಿನ ನಡುವೆ ಶಾಲೆಗಳನ್ನು ತೆರೆದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುನ್ನೆಚ್ಚರಿಕೆ ಅತಿ ಮುಖ್ಯ. ಇದರಿಂದಾಗಿ ಇನ್ನು ಆರಂಭಿಸುವ ದಿನಾಂಕ ಅಥವಾ ಇತರೆ ವಿಷಯಗಳ ಬಗ್ಗೆ ಚರ್ಚೆ ಅಗತ್ಯ ಎಂದು ಹೇಳಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆರ್ಟಿಇ ಯೋಜನೆಯಡಿ ಶಾಲೆಗಳಿಗೆ ಹಣ ಬಿಡುಗಡೆ ಮಾಡಲಾಗಿದ್ದು , ಇದನ್ನು ಶಿಕ್ಷಕರ ವೇತನಕ್ಕೆ ಬಳಸಿಕೊಳ್ಳಲು ಆಡಳಿತ ಮಂಡಳಿಗಳಿಗೆ ಅನುಕೂಲವಾಗಲಿದೆ ಎಂದು ಭಾವಿಸುತ್ತೇನೆ ಎಂದು ಸುರೇಶ್ಕುಮಾರ್ ತಿಳಿಸಿದ್ದಾರೆ.