ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಗೆ ಗೆಜೆಟ್​ ನೋಟಿಫಿಕೇಶನ್​ ಹೊರಡಿಸಲು ಕಾನೂನು ಪ್ರಕಾರ ಕ್ರಮ – ಸಚಿವ ರಮೇಶ್ ಜಾರಕಿಹೊಳಿ‌

0

ಪೀರನವಾಡಿಯಲ್ಲಿ ಸ್ಥಾಪಿಸಿದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಕುರಿತು ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು‌ ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಮೇಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ಸಮೀಪದ ಪೀರನವಾಡಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ‌ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ‌, ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ನಿನ್ನೆಯೇ ಸುಖಾಂತ್ಯವಾಗಿರುವುದು ಒಳ್ಳೆಯ ಬೆಳವಣಿಗೆ. ಸಂಗೊಳ್ಳಿ ರಾಯಣ್ಣ ಮತ್ತು‌ ಛತ್ರಪತಿ ಶಿವಾಜಿ, ಇಬ್ಬರೂ ದೇಶದ ಮಹಾಪುರುಷರು. ಅವರಿಬ್ಬರೂ ಯಾವುದೇ ಜಾತಿಗೆ ಸೀಮಿತವಲ್ಲ. ಇಬ್ಬರೂ ನಮ್ಮ ಸಮಾಜದ ಆಸ್ತಿಯಾಗಿದ್ದಾರೆ ಎಂದರು.

ರಾಷ್ಟ್ರಭಕ್ತ ಮಹಾನ್​ ನಾಯಕರ ಪ್ರತಿಮೆಗಳಿಗೆ ಯಾವುದೇ ರೀತಿಯ ಅವಮಾನವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ರಮೇಶ್ ಜಾರಕಿಹೊಳಿ‌ ಹೇಳಿದರು.

ಕರ್ನಾಟಕ ಸರ್ಕಾರಕ್ಕೆ ಶಿವಸೇನೆ ಪಕ್ಷದ ಸಚಿವರು ಪತ್ರ ಬರೆದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಜಾರಕಿಹೊಳಿ‌, ಶಿವಸೇನೆ ಬರೆದ‌ ಪತ್ರ ದುರುದ್ದೇಶದಿಂದ ಕೂಡಿದೆ. ಅವರು ಯಾವ ಅಜೆಂಡಾ ಇಟ್ಟುಕೊಂಡು ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಏರಿದ್ದಾರೆ ಎಂಬುದು ಗೊತ್ತಿದೆ. ಈ ಕುರಿತು ನಾನು ಬಹಳಷ್ಟು ಸಾರಿ ‌ಹೇಳಿದ್ದೇನೆ. ನಾವು ಅದಕ್ಕೆ ಮಹತ್ವ ಕೊಡಬಾರದು ಎಂದರು.

ಇವತ್ತು ಪೀರನವಾಡಿಯಲ್ಲಿನ ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಪುತ್ಥಳಿಗೆ ಸಚಿವ ಈಶ್ವರಪ್ಪ ಮತ್ತು ನಾನು ಹೂವಿನ ಹಾರ ಹಾಕಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದೇವೆ ಮತ್ತು ನಾವು ಸದಾ ರಾಷ್ಟ್ರಭಕ್ತರನ್ನು ಗೌರವಿಸುತ್ತೇವೆ ಎಂದರು.

ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಹಾಗೆಯೇ ಪ್ರಕರಣ ಹಿಂಪಡೆಯುವಂತೆ ಆಗ್ರಹ ಮಾಡುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು.

LEAVE A REPLY

Please enter your comment!
Please enter your name here