ಇಂಡಿಯನ್ ಪ್ರೀಮಿಯರ್ ಲೀಗ್ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 10 ರನ್ಗಳ ರೋಚಕ ಗೆಲುವು ಕೋಲ್ಕತ್ತಾ ನೈಟ್ ರೈಡರ್ಸ್ಗೆ ಹೊಸ ಹುರುಪು ನೀಡಿದೆ. ಈ ಗೆಲುವಿನೊಂದಿಗೆ ಕೆಕೆಆರ್ ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ನಾಯಕ ದಿನೇಶ್ ಕಾರ್ತಿಕ್ ಸೇರಿದಂತೆ ಸುನಿಲ್ ನರೈನ್, ಶುಬ್ಮನ್ ಗಿಲ್, ಇಯಾನ್ ಮಾರ್ಗನ್, ನಿತೀಶ್ ರಾಣ ಅಂಥ ಪ್ರದರ್ಶನ ನೀಡಿರಲಿಲ್ಲ. ಆದರೆ ರಾಹುಲ್ ತ್ರಿಪಾಠಿಯ ಸ್ಫೋಟಕ ಅರ್ಧ ಶತಕ (81 ರನ್, 51 ಎಸೆತ) ಕೋಲ್ಕತ್ತಾವನ್ನು ಸೋಲಿನಿಂದ ಪಾರು ಮಾಡಿತು.
ಪಂದ್ಯದ ಬಳಿಕ ಡಿಕೆ ಕೂಡ ತಂಡದ ಏಳು-ಬೀಳಿನ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ. ‘ನಮ್ಮ ಬ್ಯಾಟಿಂಗ್ ತುಂಬಾ ಬದಲಾಗುತ್ತಿರುತ್ತದೆ. ನಾನು 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದವನು. ಈಗ 7ನೇ ಕ್ರಮಾಂಕದಲ್ಲೂ ಆಡಿದ್ದೇನೆ. ನಮ್ಮ ತಂಡದಲ್ಲಿರುವ ಸುನಿಲ್ ಮತ್ತು ವರುಣ್ ಚಕ್ರವರ್ತಿ ಬಗ್ಗೆ ನನಗೆ ನಂಬಿಕೆಯಿದೆ,’ ಎಂದು ಕಾರ್ತಿಕ್ ಹೇಳಿದ್ದಾರೆ.
‘ನಮ್ಮಲ್ಲಿ ಕೆಲವು ಪ್ರಮುಖ ಆಟಗಾರರಿದ್ದಾರೆ. ಅವರಲ್ಲಿ ಸುನಿಲ್ ನರೈನ್ ಕೂಡ ಒಬ್ಬರು. 2-3 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದರೆ ಅದು ದೊಡ್ಡ ವಿಚಾರವಲ್ಲ. ಅವರನ್ನು ನಾವು ಬೆಂಬಲಿಸಬೇಕು. ಅಂಥ ಆಟಗಾರರಿದ್ದಾರೆ ಅನ್ನೋದು ನನಗೆ ಹೆಮ್ಮೆಯಿದೆ,’ ಎಂದು ಕಾರ್ತಿಕ್ ಅಭಿಪ್ರಾಯಿಸಿದ್ದಾರೆ.
ಹಿಂದಿನ ಪಂದ್ಯಗಳಲ್ಲಿ ಸುನಿಲ್ ನರೈನ್ ಪ್ರದರ್ಶನ ಅಷ್ಟೇನೂ ಚೆನ್ನಾಗಿರಲಿಲ್ಲ. ಆಡಿದ ಪಂದ್ಯಗಳಲ್ಲಿ 9, 0, 15 ಮತ್ತು 3 ರನ್ ಬಾರಿಸಿದ್ದರು. ಬೌಲಿಂಗ್ ಪ್ರದರ್ಶನವೂ ಅಷ್ಟೇನೂ ಗಮನಾರ್ಹವೆನಿಸಿರಲಿಲ್ಲ. 1/22, 0/31, 1/40, 0/26 ಸಾಧನೆ ತೋರಿದ್ದರು. ಆದರೆ ನಾಯಕ ಡಿಕೆ ನರೈನ್ನಂತ ಆಟಗಾರರನ್ನು ಕಡೆಗಣಿಸಬಾರದು ಎಂದಿದ್ದಾರೆ.